ಬೆಂಗಳೂರಿನಲ್ಲಿ ಇತ್ತೀಚೆಗೆ ಮಂಗಗಳ ಹಾವಳಿ ಜಾಸ್ತಿ ಆಗುತ್ತಿದೆ. ಮರದಿಂದ ಮರಕ್ಕೆ ಹಾರುವ ಮಂಗಗಳಿಗೇ ಪೈಪೋಟಿ ನೀಡುವಷ್ಟರ ಮಟ್ಟಿಗೆ ಈ ಮಂಗಗಳೂ ಪಕ್ಷದಿಂದ ಪಕ್ಷಕ್ಕೆ ಹಾರುತ್ತಿವೆ. ತಮಗೆ ಟಿಕೆಟ್ ಸಿಗುವುದಿಲ್ಲ ಎಂದು ಖಚಿತವಾಗುತ್ತಿದ್ದಂತೆ ಅವರ ನಿಷ್ಟೆಯೂ ಬೇರೆ ಪಕ್ಷಕ್ಕೆ ಉಚಿತವಾಗುತ್ತಿದೆ.
ಇಂತಹ ವಾನರರಿಂದ ನಾವು ಎಷ್ಟರ ಮಟ್ಟಿಗೆ ಉತ್ತಮ ಆಡಳಿತ ನಿರೀಕ್ಷಿಸಬಹುದು?. ಇವರನ್ನು ಬರಮಾಡಿಕೊಳ್ಳುವ ಪಕ್ಷಕ್ಕಾದರೂ ಒಂದು ನೀತಿ ಸಂಹಿತೆ ಬೇಡವಾ?. ಇವರು ಅಧಿಕಾರಕ್ಕಾಗಿ ಏನು ಮಾಡಲೂ ಸಿದ್ದ ಇರುವ ಮಂದಿ. ನಾಳೆ ಟಿಕೆಟ್ ಕೊಟ್ಟ ಪಕ್ಷವೇನಾದರೂ ಅಧಿಕಾರಕ್ಕೆ ಬರದಿದ್ದಲ್ಲಿ ಮತ್ತೆ ಯಾವ ಪಕ್ಷ ಅಧಿಕಾರ ಹಿಡಿಯುತ್ತದೋ ಅದೇ ಪಕ್ಷಕ್ಕೆ ತಮ್ಮ ನಿಷ್ಟೆ ಬದಲಾಯಿಸಿ, ಆ ಪಕ್ಷ ಮತ್ತೆ ಸೇರಿ ಅಧಿಕಾರದ ರುಚಿ ಸವಿಯುತ್ತಾರೆ.
ಇಂತಹ ಮಂಗಗಳ ನಿರ್ಮೂಲನೆಯನ್ನು ಮೊದಲು ಮಾಡಬೇಕಾಗಿದೆ. ಪ್ರಜಾತಂತ್ರಕ್ಕೆ ನಿಜವಾದ ಕಂಟಕವಿರುವುದು ಇಂತಹ ಜನರಿಂದಲೇ. ಇದು ಪ್ರತೀ ವಿದ್ಯಾವಂತ ಮತದಾರನ ಕರ್ತವ್ಯವಾಗಿದೆ. ನೀವು ಪಕ್ಷ ನೋಡಿ ಖಂಡಿತಾ ಮತ ನೀಡಬೇಡಿ. ಅಭ್ಯರ್ಥಿಯನ್ನು ನೋಡಿ ಆರಿಸಿ. ಯಾವ ಪಕ್ಷ ಬಂದರೂ ಕರ್ನಾಟಕದ ಉದ್ದಾರವಂತೂ ಕನಸಿನ ಮಾತೇ ಸರಿ. ಅವರು ಕೇವಲ ಅವರ ಜೇಬು ತುಂಬಿಸಿಕೊಳ್ಳುವುದರಲ್ಲಿ ಮಗ್ನರಾಗಿರುತ್ತಾರೆಯೇ ಹೊರತು, ಕಾವೇರಿ, ಹೊಗೇನಕಲ್ ತಮಿಳುನಾಡಿಗೆ ಹೋದರೂ ಸರಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಹೋದರೂ ಸರಿ......ಕುಂಭಕರ್ಣನ ತರಹ ನಿದ್ದೆಯಲ್ಲಿರುತ್ತಾರೆ.
ರಾಷ್ಟ್ರೀಯ ಪಕ್ಷಗಳಿಂದ ಕರ್ನಾಟಕಕ್ಕೆ ಹಾನಿಯೇ ಹೊರತು..ಖಂಡಿತಾ ಲಾಭ ಕನಸಿನ ಮಾತು. ಆದ್ದರಿಂದ ಮತದಾರರೇ ನಿಮ್ಮ ಮತ ಕರ್ನಾಟಕದ ಉಳಿವಿಗಿರಲಿ, ನಿಮ್ಮ ಮತ ಕನ್ನಡಿಗರ ರಕ್ಷಣೆಗಿರಲಿ, ನಿಮ್ಮ ಮತ ವಿದ್ಯಾವಂತ, ವಿನಯವಂತ ಅಭ್ಯರ್ಥಿಗಿರಲಿ............
"ಜೈ ಕರ್ನಾಟಕ ಮಾತೆ"